ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅಂದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ನಿರ್ಧಾರಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ. ಆದರೆ ಪಿಎಫ್ಐ ನಿಷೇಧಕ್ಕೂ ಮುನ್ನ ಕೇಂದ್ರ ಸರ್ಕಾರ ಭಾರತದ ಪ್ರಮುಖ ಮುಸ್ಲಿಂ ಸಂಘಟನೆಗಳ ಜೊತೆ ಸಭೆ ನಡೆಸಿತ್ತು. ಅಜಿತ್ ದೋವಲ್ ನಡೆಸಿದ ಸಭೆ ಕುರಿತು ಮಾಹಿತಿ ಬಹಿರಂಗವಾಗಿದೆ.
ನವದೆಹಲಿ(ಸೆ.28): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಮೇಲಿನ ದಾಳಿ, ಇದೀಗ ನಿಷೇಧ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಯೋತ್ಪಾದನೆ ಹಾಗೂ ದೇಶ ವಿರೋಧಿ ಚಟುವಟಿಕೆಯನ್ನು ಎಳ್ಳಷ್ಟು ಸಹಿಸುವುದಿಲ್ಲ ಅನ್ನೋದನ್ನು ಭಾರತ ಮತ್ತೆ ಖಡಕ್ ಸಂದೇಶದ ಮೂಲಕ ಸಾರಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೆಪ್ಟೆಂಬರ್ 17 ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದೇಶದ ಪ್ರಮುಖ ಮುಸ್ಲಿಂ ಸಂಘಟನೆಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ಪಿಎಫ್ಐ, ಎಸ್ಡಿಪಿಐ ಸೇರಿದಂತೆ ಸುನ್ನಿ ವಹಾಬಿ ಸಲ್ಫಾಯಿ ಅಜೆಂಡಾ ಅನುಸರಿಸುತ್ತಿರುವ ಸಂಘಟನೆಗಳ ಕುರಿತು ಅಭಿಪ್ರಾಯ ಕೇಳಿದ್ದಾರೆ. ದಿಯೋಬಂದಿ, ಬರೇಲ್ವಿ, ಸೂಫಿ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದ ಅಜಿತ್ ದೋವಲ್ ಸಭೆಯಿಂದಲೇ ಪಿಎಫ್ಐ ಮೇಲೆ ದಾಳಿ ಹಾಗೂ ನಿಷೇಧ ನಿರ್ಧಾರದ ಹಿಂದಿರುವ ಕಾರಣಗಳಲ್ಲೊಂದಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ(NSA) ಹಾಗೂ ಕೇಂದ್ರ ಗುಪ್ತಚರ ಇಲಾಖೆ(intelligence) ಈ ಕುರಿತು ಸಭೆ ನಡೆಸಿದೆ. ಈ ವೇಳೆ ಎಲ್ಲಾ ಮುಸ್ಲಿಂ ಸಂಘಟನೆಗಳು(Muslims Organization) ದೇಶವಿರೋಧಿ, ಭಯೋತ್ಪದನಾ ಚಟುವಟಿಕೆ ನಡೆಸುವ ಪಿಎಫ್ಐ(PFI Ban) ಹಾಗೂ ಅದರ ಅಂಗ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದೆ. ಭಾರತದಲ್ಲಿ ಉಗ್ರವಾದಕ್ಕೆ ಅವಕಾಶ ನೀಡಬಾರದು. ಕೋಮು ಸಂಘರ್ಷ(Communal) ಸೃಷ್ಟಿಸಿ ಈ ಮೂಲಕ ದೇಶ ವಿರೋದಿ ಚಟುವಟಿಕೆ ನಡೆಸುವ ಪಿಎಫ್ಐ ಸಂಘಟನೆ ಸೊಕ್ಕು ಮುರಿಯಲು ಮುಸ್ಲಿಂ ಸಂಘಟನೆ ಮುಖಂಡರು ಆಗ್ರಹಿಸಿದ್ದರು.
ಉಗ್ರವಾದ ವಿರುದ್ಧದ(Terrorims) ಹೋರಾಟದಲ್ಲಿ ನಾವೆಲ್ಲ ತಾಳ್ಮೆಯಿಂದ ವರ್ತಿಸುವುದು ಅಗತ್ಯ. ದೇಶದ ತನಿಖಾ ಸಂಸ್ಥೆಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ತನಿಖಾ ಸಂಸ್ಥೆಗಳು ಈಗಾಗಲೇ ಹಲವು ಮಾಹಿತಿ ಕಲೆ ಹಾಕಿದೆ. ಇದಕ್ಕೆ ಪೂರಕ ಸಾಕ್ಷ್ಯಗಳು ಇವೆ. ಹೀಗಾಗಿ ದಾಳಿ ಹಾಗೂ ಬಳಿಕ ತೆಗೆದುಕೊಳ್ಳುವ ಕಠಿಣ ಕ್ರಮಗಳನ್ನು ನಾವೆಲ್ಲಾ ಸ್ವಾಗತಿಸಬೇಕು. ತಾಳ್ಮೆಯಿಂದ ವರ್ತಿಸಬೇಕು. ದೇಶದ ಹಿತಕ್ಕೆ ಧಕ್ಕೆ ತರುವ ವಿಚಾರ ಈ ಭೂಮಿಯಲ್ಲಿ ಇರಬಾರದು ಎಂದು ಆಲ್ ಇಂಡಿಯಾ ಸೂಫಿ ಸಜ್ಜಾದಾನಶಿನ್ ಮುಖ್ಯಸ್ಥ ಮನವಿ ಮಾಡಿದ್ದಾರೆ.
ತನಿಖಾ ಸಂಸ್ಥೆ, ಕೇಂದ್ರ ಸರ್ಕಾರ ಉಗ್ರವಾದ ಅಂತ್ಯಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂಬುದು ಸೂಫಿ ಸಂಘಟನೆ ಅಭಿಪ್ರಾಯವಾಗಿದೆ. ಭಾರತದಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವ, ಉಗ್ರರಿಗೆ ನರೆವು ನೀಡುವ ಮೂಲಕ ದೇಶವಿರೋಧಿ ಚಟುವಟಿಕೆಯನ್ನು ನಡೆಸುವ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಎಂದು ಅಜ್ಮೇರ್ ದರ್ಗಾದ ಧಾರ್ಮಿಕ ಮುಖಂಡ ಝೈನುಲ್ ಅಬೆದಿನ್ ಆಲಿ ಖಾನ್ ಹೇಳಿದ್ದಾರೆ.
ಈ ದೇಶ ಸುರಕ್ಷಿತವಾಗಿದ್ದರೆ ಮಾತ್ರ ನಾವು ಸುರಕ್ಷಿತ. ದೇಶ ಯಾವುದೇ ಸಿದ್ಧಾಂತಕ್ಕಿಂತ ಮಿಗಿಲು. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವಿಚಾರ ಈ ದೇಶಕ್ಕೆ ಮಾರಕ ಎಂದು ಮುಸ್ಲಿಂ ಸಂಘಟನೆ ಮುಖ್ಯಸ್ಥರು ಹೇಳಿದ್ದಾರೆ.