ದೇಶದಲ್ಲಿ ಒಂದು ನೋಂದಾಯಿತ ಸಂಘಟನೆಯನ್ನು ಬ್ಯಾನ್ ಮಾಡುವುದು ಅಷ್ಟು ಸುಲಭವಲ್ಲ. ಕಾನೂನು ಹೋರಾಟ, ಸಂಘಟನೆಯ ಹೋರಾಟ ಎಲ್ಲವನ್ನೂ ಎದುರಿಸಬೇಕಾಗುತ್ತದೆ. ಆದರೆ, ಪಿಎಫ್ಐ ವಿಚಾರದಲ್ಲಿ ಸರ್ಕಾರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ 5 ವರ್ಷ ಬ್ಯಾನ್ ಮಾಡಿದೆ. ಇದಕ್ಕೆ ಕಾರಣವಾಗಿರುವುದು ಪಿಎಫ್ಐನ ರಕ್ತ ಸಿಕ್ತ ಇತಿಹಾಸ!
ಬೆಂಗಳೂರು (ಸೆ. 28): ಮೂಲಭೂತವಾದದ ಮೂಲಕ ಹಿಂದು-ಮುಸ್ಲಿಮರಲ್ಲಿ ಒಡಕು ಮೂಡಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಅಧೀನ ಎಂಟು ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ಯುಎಪಿಎ ಕಾಯ್ದೆಯ ಅಡಿಯಲ್ಲಿ ನಿಷೇಧ ಮಾಡಿದೆ. ಕೇಂದ್ರ ಗೃಹ ಸಚಿವಾಲಯ ಬುಧವಾರ ಈ ಮಹತ್ವದ ಆದೇಶದ ಹೊರಡಿಸಿದ್ದು, ಪಿಎಫ್ಐ ಹಾಗೂ ಅದರ ಎಂಟು ಸಂಸ್ಥೆಗಳ ಎಲ್ಲಾ ರೀತಿಯ ಕಾರ್ಯಚಟುವಟಿಕೆಗೆ ನಿಷೇಧ ಹೇರಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ರಿಹಬ್ ಇಂಡಿಯಾ ಫೌಂಡೇಶನ್ (ಆರ್ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಸಿಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ (ಎನ್ಸಿಎಚ್ಆರ್ಓ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜ್ಯೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್, ರೆಹಬ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿದೆ. ಕಾನೂನು ಬಾಹಿರ ಚಟುವಟಿಕೆಗಳು ಎನ್ನುವ ಮೂಲ ಕಾರಣಕ್ಕಾಗಿ ಪಿಎಫ್ಐಅನ್ನು ಬ್ಯಾನ್ ಮಾಡಲಾಗಿದೆ. ದೇಶದ ಸಮಗ್ರತೆ, ಸಾರ್ವಭೌಮತೆ, ಭದ್ರತೆಗೆ ಧಕ್ಕೆ ತರುವ ಚಟುವಟಿಕೆ, ಶಾಂತಿ ಕದಡುವ ಮತ್ತು ಉಗ್ರವಾದವನ್ನು ಬೆಂಬಲಿಸುವ ಕೆಲಸ ಹಾಗೂ ಪಿಎಫ್ಐನ ಕೆಲವರು ಟೆರರಿಸ್ಟ್ ಗುಂಪುಗಳ ಜೊತೆ ನಿಕಟ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಅದಲ್ಲದೆ, ಪಿಎಫ್ಐ ದೇಶದಲ್ಲಿ ರಕ್ತಸಿಕ್ತ ಇತಿಹಾಸವನ್ನೇ ಹೊಂದಿದೆ. ಅದರ ಹಿನ್ನೋಟ ಇಲ್ಲಿದೆ.
ಪಿಎಫ್ಐನ ನಿಷೇಧಕ್ಕೆ ಕಾರಣವಾದ ಪ್ರಮುಖ ರಕ್ತಸಿಕ್ತ ಇತಿಹಾಸಗಳು!
2010: ಪ್ರವಾದಿಯನ್ನು ನಿಂದಿಸಿದ್ದಾರೆ ಎನ್ನುವ ಆರೋಪದಲ್ಲಿ ಪ್ರೊಫೆಸರ್ ಟಿ.ಜೆ ಜೋಸೆಫ್ ಅವರ ಕೈಗಳನ್ನು ಕತ್ತರಿಸಲಾಗಿತ್ತು. ಇದರಲ್ಲಿ ಪಿಎಫ್ಐ ಪಾತ್ರ ನೇರವಾಗಿ ಪತ್ತೆಯಾಗಿತ್ತು.
2016: ಬೆಂಗಳೂರಿನಲ್ಲಿ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ. ಇದರ ಬೆನ್ನಲ್ಲಿಯೇ ರಾಜ್ಯದಲ್ಲಿ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ದೊಡ್ಡ ಹೋರಾಟ.
2010-2021: ಕೇರಳದಲ್ಲಿ 30ಕ್ಕೂ ಹೆಚ್ಚು ರಾಜಕೀಯ ಕೊಲೆ, 86 ಕೊಲೆ ಯತ್ನದ ಹಿಂದೆ ಪಿಎಫ್ಐ ಕೈವಾಡಕ್ಕೆ ಸಾಕ್ಷ್ಯ ಸಿಕ್ಕಿತ್ತು.
2019: ದೆಹಲಿಯ ಶಾಹೀನ್ ಬಾಗ್ನಲ್ಲಿ ಮಹಿಳೆಯರ ಪ್ರತಿಭಟನೆ, ಇದರಲ್ಲಿ ಪಿಎಫ್ಐನ ಸಂಚಿಗೆ ಸಿಕ್ಕಿತ್ತು ಸಾಕ್ಷ್ಯ
2019: ಉತ್ತರ ಪ್ರದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಸಿದ ಗಲಭೆಯ ಹಿಂದೆ ಪಿಎಫ್ಐನ ಸಂಘಟನೆಯ ಪಾತ್ರ ಪ್ರಮುಖವಾಗಿತ್ತು.
2019: ಕರ್ನಾಟಕದ ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಪ್ರಮುಖವಾಗಿ ಪಿಎಫ್ಐ ಪಾತ್ರ ಗೊತ್ತಾಗಿತ್ತು.
2020: ಉತ್ತರ ಪ್ರದೇಶದಲ್ಲಿ ಹತ್ರಾಸ್ ಅತ್ಯಾಚಾರ ವಿರೋಧಿ ಹಿಂಸಾತ್ಮಕ ಪ್ರತಿಭಟನೆಗೆ ಮಾರಿಷಸ್ನಿಂದ 50 ಕೋಟಿ ಪಡೆದುಕೊಂಡಿದ್ದ ಪಿಎಫ್ಐ
2020: ಕರ್ನಾಟಕದ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಿಂಸಾಚಾರದ ಹಿಂದಿತ್ತು ಪಿಎಫ್ಐ
2022: ರಾಮನವಮಿ ಸಂದರ್ಭದಲ್ಲಿ ದೇಶದ 8 ರಾಜ್ಯಗಳಲ್ಲಿ ಹಿಂಸಾಚಾರ, ಇದರಲ್ಲಿ ಪಿಎಫ್ಐನ ಕೈವಾಡಕ್ಕೆ ಸಿಕ್ಕಿತ್ತು ಸಾಕ್ಷಿ
ಉಗ್ರಸಂಘಟನೆ ಜೊತೆ ಲಿಂಕ್: ಬಾಂಗ್ಲಾದೇಶದ ಜಮಾತ್-ಉಲ್-ಮುಜಾಹಿದೀನ್ ಸಂಘಟನೆ ಜತೆ ಪಿಎಫ್ಐಗೆ ಲಿಂಗ್ ಇತ್ತು. ಅದಲ್ಲದೆ, ಟೆರರಿಸ್ಟ್ ಸಂಸ್ಥೆಗಳ ಜೊತೆ PFI ಅಂತರರಾಷ್ಟ್ರೀಯ ಸಂಪರ್ಕ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ISIS ಜೊತೆಯೂ ಇದರ ಲಿಂಕ್ಗಳಿದ್ದವು. ಅವರ ಪ್ಯಾಟರ್ನ್ಅನ್ನೇ ಅನುಕರಣೆ ಮಾಡುತ್ತಿದ್ದ ಪಿಎಫ್ಐ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವ ಪ್ಲಾನ್ ಹೊಂದಿತ್ತು. ಅನೇಕ ಹಿಂದೂ ಕಾರ್ಯಕರ್ತರ ಕೊಲೆಗಳನ್ನು ಮಾಡಿತ್ತು. ಪಿಎಫ್ಐ ಸಂಘಟನೆಯ ಕಾರ್ಯಕರ್ತರಿಂದ ಈವರೆಗೂ 11 ಜನರ ಹತ್ಯೆಯಾಗಿದೆ.
2017ರಲ್ಲಿ ಎನ್ಐಎ ರಿಪೋರ್ಟ್ನಲ್ಲಿದ್ದ 15 ಅಂಶಗಳು
ಇದೆಲ್ಲದರ ನಡುವೆ ಪಿಎಫ್ಐ ಸಂಘಟನೆ ಹಾಗೂ ಅದರ ವ್ಯವಹಾರಗಳ ಕುರಿತಾಗಿ ಎನ್ಐಎ 2017ರಲ್ಲಿಯೇ 15 ಅಂಶಗಳ ಟಿಪ್ಪಣಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಕ್ರಮ ಕೈಗೊಳ್ಳುವಂತೆಯೂ ಸೂಚಿಸಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಂಘಟನೆಯ ಉಪಟಲ ಹೆಚ್ಚಾದ ಬೆನ್ನಲ್ಲಿಯೇ ಸರ್ಕಾರ ಈ ನಿರ್ಧಾರ ಮಾಡಿದೆ. ಅಂದಿನ ವರದಿಯ 15 ಅಂಶಗಳು ಇಲ್ಲಿವೆ.
1. NIA ಸಂಘಟನೆ ಕೇರಳದ ಕಣ್ಣೂರಿನಲ್ಲಿ ಬಾಂಬ್ ತಯಾರಿ, ಟೆರರ್ ಕ್ಯಾಂಪ್ ನಿರ್ವಹಣೆ ಮಾಡುತ್ತಿದೆ
2. ಕೋಮು ಗಲಭೆ ಸೃಷ್ಟಿಸುವ ಮೂಲಕ ರಾಜಕೀಯ ವೈಷಮ್ಯದ ಲಾಭ ಪಡೆಯಲು ಯತ್ನಿಸುತ್ತಿದೆ
3. ತಾಲಿಬಾನ್ ಮಾದರಿ ದೇಶದಲ್ಲಿ ಇಸ್ಲಾಂ ಜಾರಿಗೆ ಕೆಲಸ ಮಾಡುತ್ತಿದೆ
4. PFI ಸಂಘಟನೆ ದೇಶದ ಭದ್ರತೆಗೆ ಅಪಾಯ
5. ಲವ್ ಜಿಹಾದ್, ಬಲವಂತದ ಮತಾಂತರದ ಮೂಲಕ ಇಸ್ಲಾಂ ವಿಸ್ತರಣೆಯ ಅಜೆಂಡಾ ಹೊಂದಿದೆ
6. ನಿಷೇಧಿತ ಸಿಮಿ ಸಂಘಟನೆ ಸಿದ್ಧಾಂತಗಳನ್ನೇ PFI ಅಳವಡಿಸಿಕೊಂಡಿದೆ
7. ಸಿಮಿ ಸಂಘಟನೆ ನಿಷೇಧದ ನಂತರ ಅಲ್ಲಿದ್ದ ಸದಸ್ಯರೇ PFI ಸಂಘಟನೆ ಆರಂಭಿಸಿದ್ದಾರೆ
8. ದೇಶದಲ್ಲಿ ಭಯೋತ್ಪಾದ ಕೃತ್ಯ ನಡೆಸಲು ರಹಸ್ಯವಾಗಿ ಟ್ರೈನಿಂಗ್ ಕ್ಯಾಂಪ್ಗಳನ್ನು ನಡೆಸುತ್ತಿದೆ
9. SDPI ಮೂಲಕ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಕೋಮು ವೈಷಮ್ಯ ಸೃಷ್ಟಿಸುವ ಅಜೆಂಡಾ ಹೊಂದಿದೆ
10. ಮುಸ್ಲಿಮರು ಶರಿಯಾ ಮೂಲಕವೇ ಸಿವಿಲ್ , ಕ್ರೈಂ ಕೇಸ್ಗಳನ್ನು ಬಗೆಹರಿಸಿಕೊಳ್ಳುವ ನಿಲುವು ಹೊಂದಿದೆ
11. ವಿದೇಶಿ ಉಗ್ರ ಸಂಘಟನೆಗಳೊಂದಿಗೆ ಸಂಬಂಧ, ಉಗ್ರ ಕೃತ್ಯಕ್ಕೆ ವಿದೇಶಿ ಹಣ ಸ್ವೀಕರಿಸುತ್ತಿದೆ
12. PFI ದೇಶದ 23 ರಾಜ್ಯಗಳಲ್ಲಿ ಇಸ್ಲಾಂ ಮೂಲಭೂತವಾದ ಬಿತ್ತುವ ಕೆಲಸ ಮಾಡುತ್ತಿದೆ
13. 10 ಹಿಂದೂ ಮುಖಂಡರ ಕೊಲೆ ಪ್ರಕರಣದಲ್ಲಿ PFI ನೇರ ಪಾತ್ರವಿದೆ
14. ಕೇರಳದಲ್ಲಿ 4, ಕರ್ನಾಟಕದಲ್ಲಿ 4, ತಮಿಳುನಾಡಲ್ಲಿ ಇಬ್ಬರು ಹಿಂದೂ ಮುಖಂಡರ ಕೊಲೆ
15. ಕರ್ನಾಟಕದಲ್ಲಿ ಶರತ್ ಮಡಿವಾಳ್, ರುದ್ರೇಶ್, ಪ್ರವೀಣ್ ಪೂಜಾರಿ ಹತ್ಯೆಯಲ್ಲಿ PFI ಪಾತ್ರ