ಕಾರ್ಕಳ : ಹಿಂದೂ ಸಂಘಟನೆಗಳ ಕಾರ್ಯಕರ್ತರು ಎಂದರೆ ಬಿಜೆಪಿಯ ಚೇಲಾಗಳಲ್ಲ. ಹಿಂದೂಗಳ ಭಾವನೆಗೆ ಧಕ್ಕೆಯುಂಟಾಗುವ ಸಂದರ್ಭ ಯಾವುದೇ ಸರ್ಕಾರವಿದ್ದರೂ ಖಂಡಿತ ವಿರೋಧಿಸುತ್ತೇವೆ ಎಂದು ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸೆ. 19ರಂದು ನಿಟ್ಟೆ ಲೆಮಿನಾ ಕ್ರಾಸ್ನಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಗೋ ಕಳ್ಳತನ ಹಾಗೂ ಮತಾಂತರದ ವಿರುದ್ಧ ನಡೆದ ಬೃಹತ್ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ಕಳೆದ ಮೂರು ನಾಲ್ಕು ವರ್ಷದ ಹಿಂದೆ ಟಿಪ್ಪುವಿನ ಸರಕಾರ ಇದ್ದಾಗ ಹಿಂದುತ್ವದ ರಕ್ಷಣೆಗೆ ಹೋರಾಟ ಮಾಡುತ್ತಿದ್ದೆವು. ಆದರೆ ಹಿಂದೂಗಳಿಗೆ ಬೆಂಬಲ ನೀಡುವ ಸರಕಾರ ಬಂದ ಮೇಲೂ ಹೋರಾಟ ಮಾಡೋ ದುರ್ಗತಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಚೈತ್ರ ಕುಂದಾಪುರ ಹೇಳಿದರು.
ಭಾರತದ ಪ್ರಜಾಪ್ರಭುತ್ವ ಅಫ್ಘಾನಿಸ್ಥಾನದ ತಾಲಿಬಾನಿಗಳಿಗಿಂತ ಏನು ವ್ಯತ್ಯಾಸ ಇಲ್ಲ. ಯಾಕೆಂದರೆ ಗೋಮಾತೆ ಹಾಗೂ ಹಿಂದೂ ಹೆಣ್ಣುಮಕ್ಕಳಿಗೆ ಇಬ್ಬರಿಗೂ ಇಂದು ರಕ್ಷಣೆಯಿಲ್ಲ. ಎರಡನ್ನೂ ರಕ್ಷಣೆ ಮಾಡಿಕೊಳ್ಳಲಾಗದ ಅತಂತ್ರ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಗೋಮಾತೆ ಕೇವಲ ಹಾಲನ್ನಷ್ಟೇ ನೀಡುವುದಲ್ಲ, ದೇಶಕ್ಕೆ ಅನ್ನವನ್ನು ಕೂಡ ನೀಡುತ್ತಿರುವುದು ಗೋವು. ಗೋವಿನಲ್ಲಿ ಮುಕ್ಕೋಟಿ ದೇವರುಗಳನ್ನು ಕಾಣುತ್ತೇವೆ. ಕೊಟ್ಟಿಗೆಯಲ್ಲಿರುವ ದನ, ಮನೆಯೊಳಗಿನ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಗೋರಕ್ಷಣೆಗೆ ಮತ್ತು ಮಾನ ರಕ್ಷಣೆಗೆ ಕೈಯಲ್ಲಿ ಶಸ್ತ್ರ ಹಿಡಿದು ಪ್ರತಿರೋಧ ತೋರುವುದಕ್ಕೆ ಹಿಂದೂ ಸಮಾಜ, ಹಿಂದೂ ಕಾರ್ಯಕರ್ತರು ಯಾವತ್ತೂ ಹಿಂಜರಿಯುವುದಿಲ್ಲ ಎಂದು ಚೈತ್ರ ಕುಂದಾಪುರ ಎಚ್ಚರಿಕೆ ನೀಡಿದರು.
ಗೋವು ಮತ್ತು ಗುಡಿ ಎರಡೂ ಹಿಂದೂ ಧರ್ಮದ ಅಂತಃಶಕ್ತಿಯ ಪ್ರತೀಕ. ಹತ್ತು ದಿನದ ಹಿಂದೆ ನಂಜನಗೂಡಿನಲ್ಲಿ ದೇವಸ್ಥಾನ ಧ್ವಂಸವಾಗಿದೆ. 700- 800 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ಕಟ್ಟಿದ ದೇವಸ್ಥಾನವನ್ನು ರಸ್ತೆ ಆಗುತ್ತದೆ ಎಂಬ ಕಾರಣಕ್ಕೆ ನೆಲಸಮ ಮಾಡುತ್ತಾರೆ ಎಂದಾದರೆ 70- 80 ವರ್ಷಗಳ ಹಿಂದೆ ಬಂದ ಕಾನೂನಿನಲ್ಲಿ ಅಕ್ರಮ ಎಂದು ಕರೆಸಿಕೊಳ್ಳಬೇಕಾ? ನರೇಂದ್ರ ಮೋದಿಯವರು ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದು ಬಂದು ದೇವಸ್ಥಾನ ಧ್ವಂಸ ಮಾಡಿದರೆ ಅವರನ್ನೂ ನಾವು ವಿರೋಧಿಸುತ್ತೇವೆ. ಇನ್ನು ಬೊಮ್ಮಾಯಿಯವರು ದೊಡ್ಡ ವಿಷಯ ಅಲ್ಲವೇ ಅಲ್ಲ ಎಂದು ಚೈತ್ರಾ ಹೇಳಿದರು.
ಹಿಂದೂ ಕಾರ್ಯಕರ್ತ ಯಾರು ಕೂಡ ಬಿರಿಯಾನಿ ಅಥವಾ ಪಿಂಕ್ ನೋಟಿನ ಆಸೆಗೆ ರಾಜಕೀಯ ಸಮಾವೇಶಕ್ಕೆ ಹೋದವರಲ್ಲ. ವೋಟ್ ಹಾಕಿದವನೂ ಅಲ್ಲ. ಬದಲಾಗಿ ಕೇಸರಿ ಶಾಲು ಹಾಕಿಕೊಂಡು ಹೋಗಿ ವೋಟ್ ಹಾಕುತ್ತಾನೆ ವಿನಃ ಬಿಜೆಪಿ ಶಾಲು ಹಾಕೊಂಡು ಹೋಗಿಲ್ಲ. ಹಿಂದುತ್ವದ ರಕ್ಷಣೆಗೆ ವೋಟ್ ಹಾಕುತ್ತಾರೆ ವಿನಹ ಜಾತ್ಯಾತೀತರಿಗೆ ಬಕೆಟ್ ಹಿಡಿಯಲು ಅಲ್ಲ. ನಮ್ಮ ದೇವಸ್ಥಾನ ಅಲ್ಲಿಯೇ ಕಟ್ಟಿಕೊಡಿ ಎಂದು ಹೇಳುತ್ತಿರುವುದು ದೇವಸ್ಥಾನ ಕಟ್ಟಲು ತಾಕತ್ತಿಲ್ಲ ಅಂತಲ್ಲ. ಆದರೆ, ಕೆಡವಿದವರಿಂದಲೇ ದೇವಸ್ಥಾನ ಮತ್ತು ನಿರ್ಮಾಣ ಮಾಡಿಸುವುದರ ಮೂಲಕ ಇನ್ನು ಮುಂದೆ ಯಾವ ಅಧಿಕಾರಿಯಾಗಲಿ, ಸಚಿವರಾಗಲಿ ಹಿಂದೂಗಳ ದೇವಸ್ಥಾನ ಮುಟ್ಟುವ ಧೈರ್ಯ ಮಾಡಬಾರದು ಎಂದು ಚೈತ್ರಾ ಹೇಳಿದರು.
ಹಿಂದೂ ಧರ್ಮವನ್ನು ಮಾನಸಿಕವಾಗಿ ಮತಾಂತರ ಮಾಡುವ ಪ್ರಯತ್ನ ನಡೀತಾ ಇದೆ. ಕತ್ತಿಹಿಡಿದು ಮತಾಂತರ ಮಾಡುವವರನ್ನು ಎದುರಿಸಲು ಬಜರಂಗದಳವಿದೆ. ಆದರೆ, ಕೇಕ್ ಪೀಸ್ ಹಿಡಿದು ವೈನ್ ಕೊಡಿಸಿ ಮತಾಂತರ ಮಾಡುವವರು ತುಂಬಾ ಅಪಾಯಕಾರಿ. ನಾವು ಕ್ರಿಶ್ಚಿಯನ್ ವಿರೋಧಿಯಲ್ಲ ಆದರೆ ನೀರಿನಲ್ಲಿ ಮುಳುಗಿದಾಗ ಕ್ಯಾನ್ಸರ್ ಗುಣ ಆಗುತ್ತದೆ ಎನ್ನುವವರ ವಿರೋಧಿಗಳು ಎಂದವರು ತಿಳಿಸಿದರು.
ರಾಜ್ಯದಲ್ಲಿ ಮತಾಂತರ, ಮಿಶನರಿಗಳ ಷಡ್ಯಂತ್ರ ಇತ್ತೀಚೆಗೆ ಹೆಚ್ಚಾಗಿದೆ. ಜಾಗೃತಿಯ ಈ ಹೋರಾಟ ಕೇವಲ ಜನಜಾಗೃತಿಗಷ್ಟೆ ಅಲ್ಲ. ಹಿಂದೂ ವಿರೋಧಿ ಕೃತ್ಯ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಸಂದೇಶವು ಆಗಿದೆ. ಯಾವುದೇ ಬೆದರಿಕೆಗಳಿಗೆ ಹಿಂದೂ ಸಂಘಟನೆಯವರು ಜಗ್ಗುವುದಿಲ್ಲ. ಹಿಂದುತ್ವದ ರಕ್ಷಣೆಗೆ ನಾವು ಸದಾ ಸಿದ್ಧರಾಗಿರುತ್ತೇವೆ ಎಂದು ಭಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್. ಎಚ್ಚರಿಕೆ ನೀಡಿದರು.
ವೇದಿಕೆಯಲ್ಲಿ ವಿಎಚ್ಪಿ ಜಿಲ್ಲಾಧ್ಯಕ್ಷ ವಿಶ್ವಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಭಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ, ತಾಲೂಕು ಉಪಾಧ್ಯಕ್ಷ ಅಶೋಕ್ ಕುಮಾರ್ ಜೈನ್, ಜಗದೀಶ್ ಸಾಣೂರು ಉಪಸ್ಥಿತರಿದ್ದರು. ಭಜರಂದದಳ ತಾಲೂಕು ಸಂಚಾಲಕ ಚೇತನ್ ಪೇರಲ್ಕೆ ಸ್ವಾಗತಿಸಿ, ಸುರಕ್ಷಾ ನಿರೂಪಿಸಿದರು. ಮನೀಷ್ ನಿಟ್ಟೆ ವಂದಿಸಿದರು.