ವಿಜಯಪುರ: ಸಿಎಂ ಆಗುವ ಆಸೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಚ್ಚಿಟ್ಟಿದ್ದಾರೆ. ಸಿಎಂ ಆಗುವ ಆ ಕಾಲ ಬಂದೆ ಬರುತ್ತೆ ಎಂದಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವಿಶ್ವಕರ್ಮ ಸಮಾಜದ ಕಾರ್ಯಕ್ರಮದ ವೇದಿಕೆಯಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಮುಂದೊಂದು ದಿನ ಆ ಕಾಲ ಬಂದೇ ಬರುತ್ತೆ. ಆ ಜಾಗದಲ್ಲಿ ಒಯ್ದು ನನ್ನ ಕೂರಿಸುತ್ತೆ. ಸಿಎಂ ಆಗುವ ಆ ಕಾಲ ಬಂದೇ ಬರುತ್ತೆ. ಇನ್ನು ಯತ್ನಾಳ್ದು ಮುಗಿತು ಎನ್ನುವ ಹುಚ್ಚು ಭ್ರಮೆಯಲ್ಲಿ ಇದ್ದರೆ ಅದನ್ನ ತಲೆಯಿಂದ ತೆಗೆಯಿರಿ. ಉಪದ್ಯಾಪಿಗಳು ಎಷ್ಟು ಹಾರಾಡಿದರು ಏನೂ ಆಗಲ್ಲ. ಯೋಗಿ ಆದಿತ್ಯನಾಥರನ್ನು ಸಿಎಂ ಮಾಡಬೇಕು ಎಂದು ಇರಲಿಲ್ಲ. ಹಿಂದುತ್ವದ ಉಳುವಿಗಾಗಿ ಸಿಎಂ ಮಾಡಬೇಕಾದ ಅನಿವಾರ್ಯತೆ ಬಂತು ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ನಾನು ಮಂತ್ರಿ ಸ್ಥಾನವನ್ನು ಕೇಳಲಿಲ್ಲ, ಮಂತ್ರಿ ಆಗಬೇಕೆಂದು ಯಾರ ಮನೆಗೂ ಹೋಗಿಲ್ಲ. ಸಿಎಂ ಮಾಡಿ ಎಂದು ದೆಹಲಿಗೂ ಹೋಗಿಲ್ಲ. ನನಗೆ ಅದರ ಮೇಲೆ ಆಸೆಯೂ ಇಲ್ಲ ಎಂದು ಮಂತ್ರಿ ಸ್ಥಾನ ಹಾಗೂ ಸಿಎಂ ಸ್ಥಾನ ಸಿಗದಿದ್ದರ ಕುರಿತು ಹೇಳಿದರು.
ಸಾರ್ವಜನಿಕ ಗಣೇಶೋತ್ಸವಕ್ಕ ಅನುಮತಿ ನೀಡುವ ವಿಚಾರವಾಗಿ ಮಾತನಾಡಿ, ಮೊನ್ನೆ ಎಲ್ಲರೂ ಅವರವರ ಜಾತ್ರೆ ಮಾಡಿಕೊಂಡಿದ್ದಾರೆ. ಮೊಹರಂ ಅದ್ಧೂರಿಯಾಗಿ ಆಚರಿಸಿದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಗೌರವಯುತವಾಗಿ ಗಣೇಶ ಕೂರಿಸಲು ಅವಕಾಶ ಕೊಡಿ ಎಂದಿದ್ದೇನೆ. ಗೃಹ ಸಚಿವರ ಜೊತೆಗೆ ಮಾತನಾಡಿದ್ದೇನೆ. ನಮ್ಮ ಬೇಡಿಕೆ ಇಡೇರಿಸುತ್ತೇವೆ ಎಂದಿದ್ದಾರೆ. ಗಣೇಶ ಚತುರ್ಥಿ ಹಿಂದೂಸ್ತಾನದಲ್ಲಿ ಮಾಡದೇ ಪಾಕಿಸ್ತಾನದಲ್ಲಿ ಮಾಡಲು ಆಗುತ್ತಾ? ಮುಂದೊಂದು ದಿನ ಪಾಕಿಸ್ತಾನದಲ್ಲೂ ಗಣೇಶ ಕೂರಿಸುವ ಕಾಲ ಬರುತ್ತದೆ. ಪಾಕಿಸ್ತಾನದಲ್ಲಿ ಗಣೇಶ ಕೂರಿಸುವ ಕಾಲ ದೂರ ಇಲ್ಲ ಎಂದರು.