ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಮನೆ ಮಠ, ಸ್ಕೂಲ್ ಕಾಲೇಜು, ಕಂಪನಿಗಳನ್ನು ಮಾಡಿಕೊಂಡು ನಮ್ಮದೇ ಜಾಗ ಇದು ಅಂತಾ ಬೋರ್ಡ್ ಹಾಕಿಕೊಂಡಿರುವವರನ್ನು ನೋಡಿದ್ದೇವೆ. ಆದರೆ ಗ್ರಾಮದ ಯುವಕರು ನಡೆಸಿದ ಪ್ರಯತ್ನದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸ್ವತ್ತು ಮತ್ತೆ ಗ್ರಾಮಕ್ಕೆ ಸೇರಿದೆ.
ಬೆಂಗಳೂರು ಪೂರ್ವ ತಾಲೂಕು, ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡ ಅಗ್ರಹಾರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮುಂಭಾಗದ ಸುಮಾರು ಹದಿಮೂರುವರೆ ಗುಂಟೆ ಜಾಗವನ್ನು ಅನೇಕರು 20 ವರ್ಷಗಳ ಹಿಂದೆ ಖಾಸಗಿಯವರಿಗೆ ಪರಭಾರೆ ಮಾಡಲಾಗಿತ್ತು. ಗ್ರಾಮದ ಯುವಕರು ಇದು ಸರ್ಕಾರಿ ಜಾಗ ಹೇಗೆ ಖಾಸಗಿಯವರಿಗೆ ಸೇರಿದೆ ಅಂತಾ ಹೋರಾಟಕ್ಕೆ ನಿಂತರು. ಕಂದಾಯ ಇಲಾಖೆಗೆ ಪತ್ರಗಳನ್ನು ಬರೆಯುವ ಮೂಲಕ ಗ್ರಾಮದ ನಕ್ಷೆಯಲ್ಲಿರುವ ಗ್ರಾಮ ಠಾಣಾ ಸ್ವತ್ತನ್ನು ಗುರುತಿಸಿ ಗ್ರಾಮಕ್ಕೆ ಮರಳಿ ನೀಡುವಂತೆ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಕಳೆದ ತಿಂಗಳು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಇದು ಸರ್ಕಾರಿ ಸ್ವತ್ತು, ಗ್ರಾಮಠಾಣಾ ವ್ಯಾಪ್ತಿಗೆ ಬರಲಿದೆ ಅಂತಾ, ಗುರುತಿಸಿ ಅಲ್ಲಿ ಅತಿಕ್ರಮಣ ಮಾಡಿಕೊಂಡಿದ್ದವರನ್ನು ತೆರವು ಮಾಡಿಸಿ ಬೋರ್ಡ್ ಹಾಕಿದ್ದಾರೆ. ಸರಿ ಸುಮಾರು 4 ಕೋಟಿಗೂ ಅಧಿಕ ಬೆಲೆ ಬಾಳುವ ಜಾಗವನ್ನು ಗ್ರಾಮಕ್ಕೆ ಮತ್ತೆ ಉಳಿಸಿಕೊಂಡ ಸಂತಸ ಗ್ರಾಮದ ಯುವಕರಿಲ್ಲಿದ್ದು ಇಲ್ಲಿ ಶಾಲಾ ಮಕ್ಕಳಿಗೆ ಆಟದ ಮೈದಾನ, ಲೈಬ್ರರಿ, ಕುಡಿಯುವ ನೀರಿನ ಘಟಕ ಮತ್ತು ಸಮುದಾಯ ಭವನ ಮಾಡುವ ಉದ್ದೇಶವನ್ನು ಯುವಕರು ಹೊಂದಿದ್ದಾರೆ.
ಗ್ರಾಮದ ಯುವಕರ ಪ್ರಯತ್ನದಿಂದ ಕಂಡವರ ಪಾಲಾಗುತ್ತಿದ್ದ ಗ್ರಾಮದ ಜಾಗ ಉಳಿದಿದೆ. ಇದೇ ರೀತಿ ಸರ್ಕಾರಿ ಜಾಗವನ್ನು ಉಳಿಸುವ ಕೆಲಸ ಪ್ರತಿಯೊಬ್ಬರು ಮಾಡಿದ್ದರೆ ಒತ್ತುವರಿ ಮಾಡುವವರಿಗೆ ಪಾಠ ಕಲಿಸಿದಂತೆ ಆಗಲಿದೆ.