ಬೆಂಗಳೂರು (ಜು.22): ಅವರಿಬ್ಬರೂ ಇನ್ನೂ ಬಾಳಿ ಬದುಕಬೇಕಿರುವ ಚಿಣ್ಣರು ಇಬ್ಬರಿಗೂ ಪೊಲೀಸ್ ಆಫೀಸರ್ ಆಗುವ ಕನಸು. ಆದ್ರೆ ಮಾರಕ ವ್ಯಾಧಿ ಅವರನ್ನ ಇನ್ನಿಲ್ಲದಂತೆ ಕಾಡ್ತಿದೆ. ಪ್ರತಿನಿತ್ಯ ಜೀವನ್ಮರಣದ ಹೋರಾಟದಲ್ಲಿ ಕಮರಿ ಹೋಗ್ತಿರುವ ಕನಸನ್ನ ಬೆಂಗಳೂರು ಪೊಲೀಸರು ನೆರವೇರಿಸಿದ್ದಾರೆ.
ಇಬ್ಬರು ಬಾಲಕರಿಗೆ ಒಂದು ದಿನ ಪೊಲೀಸ್ ಗೌರವ: ಮಿಥಿಲೇಶ್ ಹಾಗೂ ಮಹಮ್ಮದ್ ಸಲ್ಮಾನ್ ಎಂಬ14 ವರ್ಷದ ಮಕ್ಕಳನ್ನು ಪೊಲೀಸರು ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಯನ್ನಾಗಿ ಮಾಡಿ ಗೌರವ ನೀಡಿದ್ದಾರೆ. ಇಬ್ಬರೂ ಬಾಲಕರೂ ಇವತ್ತು ಒಂದು ದಿನದ ಮಟ್ಟಿಗೆ ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ್ದರು. ಪೊಲೀಸ್ ಅಧಿಕಾರಿಗಳಾಗುವ ಕನಸು ಕಂಡಿದ್ದ ಇಬ್ಬರನ್ನೂ ಮಾರಣಾಂತಿಕ ಖಾಯಿಲೆ ಭಾದಿಸುತ್ತಿದೆ.
ಇಬ್ಬರ ಆಸೆಯನ್ನ ಇವತ್ತು ಮೇಕ್ ಎ ವಿಶ್ ಫೌಂಡೇಶನ್ ಸಹಭಾಗಿತ್ವದಲ್ಲಿ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ನೇರವೇರಿಸಿದ್ರು. ಹೊಸೂರು ಮೂಲದ ಮಿಥಿಲೇಶ್ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, ಇತ್ತ ಕೇರಳದ ಕೊಟ್ಟಾಯಂ ಮೂಲದ ಮೊಹಮ್ಮದ್ ಸಲ್ಮಾನ್ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರಿಗೂ ಸಹ ಪೊಲೀಸ್ ಅಧಿಕಾರಿಗಳಾಗಬೇಕು ಅನ್ನುವ ಹಂಬಲ.
ಇವರಿಬ್ಬರ ಕನಸನ್ನ ಅರಿತ ಮೇಕ್ ಎ ವಿಶ್ ಫೌಂಡೇಶನ್ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾರ ಸಹಕಾರದೊಂದಿಗೆ ನೆರವೇರಿಸಿದೆ. ಪುಟ್ಟ ಆಫೀಸರ್ಸ್ಗೆ ಠಾಣೆಯ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡು ಇಬ್ಬರಿಗೂ ಪೊಲೀಸ್ ಅಧಿಕಾರಿಯ ಗೌರವ ಸಮರ್ಪಿಸಿದ್ರು. ದಿನ ಬೆಳಗಾದ್ರೆ ಒಂದಿಲ್ಲೊಂದು ಚಿಕಿತ್ಸೆ, ಆಸ್ಪತ್ರೆಯ ಬದುಕಿನ ನಡುವೆ ಕನಸುಗಳು ಕಮರಿ ಹೋಗುತ್ತಿರುವ ಭಯವನ್ನ ದೂರಾಗಿಸುವ ಪೊಲೀಸರೆಂದ್ರೆ ಭಯವಲ್ಲ ಭರವಸೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
#RSSTIMES