ಕುಕನೂರು(ಜು.17): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪತ್ನಿ ಚೆನ್ನಮ್ಮ ಅವರು ಶನಿವಾರ ತಮ್ಮ ಬೊಮ್ಮಾಯಿ ಕುಟುಂಬದ ಮನೆ ದೇವರಾದ ಪಟ್ಟಣದ ಶ್ರೀ ಮಹಾಮಾಯಾ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆಯೊಂದನ್ನು ಕಟ್ಟಿದ್ದಾರೆ. ಮಹಾಮಾಯಾ ದೇವಸ್ಥಾನಕ್ಕೆ ಅವರು ಪ್ರತಿವರ್ಷ ಆಗಮಿಸುತ್ತಿದ್ದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಆನಂತರ ಇದೇ ಪ್ರಥಮ ಬಾರಿಗೆ ಆಗಮಿಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಉಡಿ ತುಂಬಿದರು. ದೇವಿಗೆ ಮಂಡಿಯೂರಿ ನಮಸ್ಕರಿಸಿದರು. ಉಡಿ ತುಂಬಿದ ಆನಂತರ ತಮ್ಮ ಮನದಾಳದ ಇಷ್ಟಾರ್ಥ ಈಡೇರಿಸುವಂತೆ ಹರಕೆ ಕಟ್ಟಿದರು.
ತಮ್ಮ ಆಗಮನದ ಪ್ರಚಾರ ಬೇಡ, ಯಾರಿಗೂ ತಿಳಿಸಬೇಡಿ ಎಂದು ಅವರು ಮೊದಲೇ ಅರ್ಚಕರಿಗೆ ತಿಳಿಸಿದ್ದರೆನ್ನಲಾಗಿದೆ. ಆದರೂ ಮಾಧ್ಯಮದವರು ಆಗಮಿಸಿದ್ದರಿಂದ ಅರ್ಚಕರು ಸಮಜಾಯಿಶಿ ನೀಡಲು ಮುಂದಾಗುತ್ತಿದ್ದಂತೆ ಮನೆ ದೇವರು, ಪ್ರತಿ ವರ್ಷ ಬರುತ್ತೇವೆ ಎಂದರು. ಮಾಧ್ಯಮದವರಿಂದಲೇ ಪ್ರಚಾರ, ಸಮಾಜದ ಸ್ಥಿರತೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಖ್ಯಮಂತ್ರಿ ಅವರಿಗೆ ಹೇಳಿ ವಿಶೇಷ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಅರ್ಚಕ ಮಂಡಳಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಮನವಿ ಮಾಡಿದ್ದಾರೆ. ಇನ್ನೊಂದು ಸಾರಿ ನೆನಪಿಸುವುದಾಗಿ ಚೆನ್ನಮ್ಮ ಹೇಳಿದರು.
ಅಂಜನಾದ್ರಿ ಮೆಟ್ಟಿಲೋತ್ಸವಕ್ಕೆ ಚಾಲನೆ
ಗಂಗಾವತಿ: ಅಂಜನಾದ್ರಿ ಮೆಟ್ಟಿಲೋತ್ಸವಕ್ಕೆ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಚಾಲನೆ ನೀಡಿದರು. ತಾಲೂಕಿನ ಐತಿಹಾಸಿಕ ಅಂಜನಾದ್ರಿಯಲ್ಲಿ ಮಂತ್ರಾಲಯ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಹಮ್ಮಿಕೊಂಡಿರುವ ಮೆಟ್ಟಿಲೋತ್ಸವ ಸಂದರ್ಭದಲ್ಲಿ ಲಲಿತಾರಾಣಿ ಶ್ರೀರಂಗದೇವರಾಯಲು ಅವರು ಮೆಟ್ಟಿಲುಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳಾ ಭಜನಾ ಮಂಡಳಿ ಸದಸ್ಯರು ಮೆಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಇಂತಹ ಅಧ್ಯಾತ್ಮ ಕಾರ್ಯಕ್ರಮಗಳನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಕೈಗೊಳ್ಳುವ ಮೂಲಕ ಹಿಂದೂ ಧರ್ಮ ಜಾಗೃತಿ ನಡೆಸಿರುವುದು ಉತ್ತಮ ಸಂಗತಿ ಎಂದರು.
ಅಧ್ಯಾತ್ಮ ಚಿಂತನೆ ಹಾಗೂ ಪಾರಂಪರಿಕ ನಡಿಗೆ, ಚರಣಗಳ ರೋಹಣದಿಂದ ಜೀವನದಲ್ಲಿ ಸಾಕಷ್ಟುಬದಲಾವಣೆ ಕಾಣಲು ಸಾಧ್ಯವಿದೆ ಎಂದು ಮಂತ್ರಾಲಯ ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುನೇಶಾಚಾರ್ಯ ಹೇಳಿದರು.
ಬೆಟ್ಟ ಏರುವುದು ಹಾಗೂ ಪಾರಂಪರಿಕ ನಡಿಗೆಯಂತಹ ಕಾರ್ಯಗಳು ಆರೋಗ್ಯಕ್ಕೂ ಸಾಕಷ್ಟುಅನುಕೂಲ ಮಾಡಿಕೊಡುತ್ತವೆ. ಅಧ್ಯಾತ್ಮ ಚಟುವಟಿಕೆಯನ್ನು ನಿರಂತರವಾಗಿ ಕೈಗೊಳ್ಳುವುದರಿಂದ ಹಾಗೂ ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಜೀವನ ಸಾರ್ಥಕವಾಗಲಿದೆ. ಅಂಜನಾದ್ರಿ ಪರ್ವತ ಹನುಮನ ಜನ್ಮಸ್ಥಳವಾಗಿದೆ. ಪರಮಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ಕೈಗೊಳ್ಳುವ ಪ್ರತಿ ಕಾರ್ಯಕ್ರಮ ಯಶಸ್ವಿಯಾಗಲಿದೆ. ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳವಾಗಿದೆ ಎಂದು ಹೇಳಿದರು.
ಮೆಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಂದು ಸಾವಿರಕ್ಕೂ ಅಧಿಕ ಹರಿದಾಸ ಬಂಧುಗಳು ಭಾಗವಹಿಸಿದ್ದರು. ಚಿತ್ರನಟ ವಿಷ್ಣುತೀರ್ಥ ಜೋಷಿ ಆದಾಪುರ, ಶ್ರೀಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಹೊಸಪೇಟೆ ರಾಯರ ಮಠದ ಮಠಾಧಿಕಾರಿ ಪವನ್ ಆಚಾರ್ಯ, ಸಿಂಧನೂರು ರಾಘವೇಂದ್ರ ದೇಸಾಯಿ, ಅರ್ಚಕರಾದ ನರಸಿಂಹ ಆಚಾರ್ಯ, ವಿಜೀಂದ್ರ ಆಚಾರ್ಯ ಮುಂತಾದವರು ಇದ್ದರು.
#RSSTIMES