ಈಗಿನ ಆಂಧ್ರ ರಾಜ್ಯದ ಪೂರ್ವಗೋದಾವರಿ ಜಿಲ್ಹೆಯಲ್ಲಿರುವ ಪೀಠಾಪುರವೆಂಬ ಸುಗ್ರಾಮವು ಹಿಂದೆ ತ್ರಿಲಿಂಗ ದೇಶಾಂತರ್ಗತವಾದ ಭೀಮಮಂಡಲದ ಏಲಾನದಿಯ ತೀರದಲ್ಲಿನ ಶ್ರೀ ಪೀಠಿಕಾಪುರವೆಂಬ ಹೆಸರಾಂಕಿತ ದಿವ್ಯ ಪುಣ್ಯ ಕ್ಷೇತ್ರವಾಗಿತ್ತು. ಈ ಕ್ಷೇತ್ರದಲ್ಲಿ, ಸುಮಾರು ಏಳು ನೂರು ವರ್ಷಗಳ ಹಿಂದೆ, ಭಾರದ್ವಾಜ ಗೋತ್ರ ಆಪಸ್ತಂಬ ಸೂತ್ರದ ಬ್ರಹ್ಮಶ್ರೀ ಘಂಡಿಕೋಟ ಅಪ್ಪಲರಾಜ ಶರ್ಮಾ ಮತ್ತು ಶ್ರೀಮತಿ ಸುಮತಿ ಎಂಬ ಧರ್ಮನಿಷ್ಠ ಸುಸಂಸ್ಕೃತ ದಂಪತಿಗಳಿದ್ದರು. ಅವರಿಗೆ ಕಾಲಾಂತರದಲ್ಲಿ ಶ್ರೀಧರರಾಜ ಮತ್ತು ರಾಮರಾಜ ಎಂಬ ಇಬ್ಬರು ಮಕ್ಕಳಾದರು. ದೈವವಶಾತ್ ಇಬ್ಬರು ಮಕ್ಕಳೂ ಬಾಲ್ಯದಿಂದಲೇ ಅಂಗಹೀನರಾಗಿದ್ದರು.
ಹೀಗಿರುವಾಗ ಒಂದು ದಿನ …..
ಶ್ರೀ ಅಪ್ಪಲರಾಜ ಶರ್ಮರ ಮನೆಯಲ್ಲಿ ಪಿತೃಶ್ರಾದ್ಧದ ಕ್ರಿಯಾಕರ್ಮದ ಕಾರ್ಯಕ್ರಮ ನಡೆದಿತ್ತು. ಸಾಧ್ವಿ ಸುಮತಿ ಬ್ರಾಹ್ಮಣ ಭೋಜನದ ಸಿದ್ಧತೆಯಲ್ಲಿದ್ದರು.
ಮಧ್ಹಾನ್ಹದ ಸಮಯ. ಒಬ್ಬ ಭಿಕ್ಷುಕ ಮನೆಬಾಗಿಲಿಗೆ ಬಂದು ಸಾಧ್ವಿ ಸುಮತಿಯೊಂದಿಗೆ ಭಿಕ್ಷೆ ಹಾಕಲು ಕೇಳಿಕೊಂಡನು. ಮನೆಯಲ್ಲಿ ಪಿತೃಶ್ರಾದ್ಧ ನಡೆದಿದೆ; ಬ್ರಾಹ್ಮಣರ ಭೋಜನವಿನ್ನೂ ಆಗಿಲ್ಲ. ಭಿಕ್ಷವನ್ನೆಂತು ಹಾಕಬೇಕು?
ಆದರೂ, ಆ ದತ್ತಭಕ್ತೆ, ಮಹಾಸಾಧ್ವಿ ‘ಮಟಮಧ್ಹಾನ್ಹದ ಈ ಸಮಯದಲ್ಲಿ ತಮ್ಮ ಮನೆಗೇ ಮಧುಕರಿಗೆ ಬಂದಿರಬೇಕಾದರೆ ಇದು ದತ್ತನ ಆಟವೇ ಇರಬೇಕು, ಇವನು ದತ್ತನ ಹೊರತು ಬೇರೆ ಯಾರೂ ಆಗಲು ಶಕ್ಯವಿಲ್ಲ’ ಎಂದು ಅನಿಸಿಕೊಂಡು, ‘ತನ್ನ ಈ ಅನ್ನದಾನ ಪಿತೃಗಳಿಗೂ ಸಂತೃಪ್ತಿ ಕೊಡುವ ಕಾರ್ಯವೇ’ ಎಂದು ನಿಶ್ಚೈಸಿ, ದೃಢ ಮನಸ್ಸಿನಿಂದ, ಭಕ್ತಿ-ಶ್ರದ್ಧೆಯಿಂದ ಭಿಕ್ಷೆ ನೀಡಿದಳು. ಅವಳ ಆ ದೃಢ ಭಕ್ತಿಗೆ ಮೆಚ್ಚಿದ ಭಿಕ್ಷುಕ ವೇಷಧಾರಿ ಗುರು ದತ್ತಾತ್ರೇಯನು ತನ್ನ ನಿಜರೂಪ ತೋರಿಸಿ ‘ಅಮ್ಮಾ, ನಿನ್ನ ಮನದಿಚ್ಛೆಯನ್ನು ಕೋರಿಕೋ’ ಎಂದನು. ಆಗ ಆ ಸಾಧ್ವಿ ಸುಮತಿ ದೇವಿಯು ‘ಭಗವಂತಾ! ನೀನು ನನ್ನನ್ನು ಅಮ್ಮಾ ಎಂದಿದ್ದೀಯೆ. ಆ ಮಾತನ್ನು ನಿಜವಾಗಿಸು. ನೀನು ನನಗೆ ಪುತ್ರನಾಗಿ ಜನಿಸಬೇಕು’ ಎಂದು ಬೇಡಿಕೊಂಡಳು. ‘ಹಾಗೇ ಆಗಲಿ’ ಎಂದು ದತ್ತಾತ್ರೇಯನು ಅಭಯವನ್ನಿತ್ತು ಅದೃಶ್ಯನಾದನು. ಮುಂದೆ ಕಾಲಕಳೆದಂತೆ ಗಣೇಶ ಚತುರ್ಥಿಯ ಬೆಳಗು ಮುಂಜಾನೆ, ಚಿತ್ರಾ ನಕ್ಷತ್ರದ ಸುಮುಹೂರ್ತದಲ್ಲಿ ಶ್ರೀಮತಿ ಸುಮತಿ ಗಂಡುಮಗುವಿಗೆ ಜನ್ಮವಿತ್ತಳು. ಇವರೇ ಶ್ರೀಪಾದ ಶ್ರೀವಲ್ಲಭರು!
ತ್ರೇತಾಯುಗದಲ್ಲಿ ಸತಿ ಅನಸೂಯ ಮತ್ತು ಋಷಿ ಅತ್ರಿ ದಂಪತಿಗಳ ಮಗನೇ ದತ್ತಾತ್ರೇಯನು. ಸತಿ ಅನಸೂಯಳ ಪಾತಿವೃತ್ಯ ಪರೀಕ್ಷೆಗೆ ಬಂದ ಬ್ರಹ್ಮ-ವಿಷ್ಣು-ಮಹೇಶ್ವರ ತ್ರಿಮೂರ್ತಿಗಳೇ ದತ್ತಾತ್ರೇಯರಾಗಿ ಅತ್ರಿ ದಂಪತಿಗಳ ಮಗುವಾದರು. ಗುರು ದತ್ತಾತ್ರೇಯನು ಈ ಭರತವರ್ಷದಲ್ಲಿ ಆಗಾಗ ಅಲ್ಲಲ್ಲಿ ವಿಧ ವಿಧ ರೂಪದಲ್ಲಿ ಅವತಾರ ಧರಿಸಿ, ಆ ಆ ಕಾಲನಿಯಮಕ್ಕೆ ತಕ್ಕಂತೆ ಮನುಕುಲಕ್ಕೆ ಮಾರ್ಗದರ್ಶನ ಮಾಡಿ, ಜನರನ್ನು ಧರ್ಮಮಾರ್ಗದಲ್ಲಿ ಕರೆದೊಯ್ಯುತ್ತಿರುವದು ಚರಿತ್ರೆಯ ತುಂಬೆಲ್ಲಾ ಕಾಣಸಿಗುತ್ತದೆ.
ಶ್ರೀಪಾದ ಶ್ರೀವಲ್ಲಭರು ಕಲಿಯುಗದಲ್ಲಿ ಗುರು ದತ್ತಾತ್ರೇಯನ ಮೊಟ್ಟ ಮೊದಲ ಅವತಾರ!
ಪ್ರಭಾ ಭಟ್ಟ, ಪುಣೆ
(ಮುಂದುವರಿಯುವದು)