ಕರ್ತಾರ್ ಸಿಂಗ್ ಸರಬಾ ಹುಟ್ಟಿದ್ದು ಮೇ 24, 1896 ರಲ್ಲಿ, ಬಾಲ್ಯದಲ್ಲೇ ಅಪ್ಪ ಅಮ್ಮನ ಪ್ರೀತಿ ಕಳೆದುಕೊಂಡ ಸರಾಭನ ಜವಾಬ್ದಾರಿ ವಹಿಸಿಕೊಂಡಿದ್ದು ಈತನ ಅಜ್ಜ. ಅಮೆರಿಕಾಕ್ಕೆ ಹೆಚ್ಚಿನ ವ್ಯಾಸಂಗಕ್ಕಾಗಿ ಹೋದ ಸರಾಭ ಅಲ್ಲಿನ ಗಧರ್ ಎಂಬ ಸಂಘಟನೆಯೊಂದಿಗೆ ಗುರುತಿಸಿಕೊಂಡನು..
ಸತ್ಯೇನ್ ಸೇನ್ ಮತ್ತು ವಿಷ್ಣು ಗಣೇಶ್ ಪಿಂಗ್ಲೆ ಜೊತೆ ಕೊಲಂಬೋ ಮೂಲಕ ನವೆಂಬರ್ 1914ರಂದು ಕೊಲ್ಕತ್ತಾ ಪ್ರವೇಶಿಸಿದ ಸರಭಾ ಭಾರತದಲ್ಲಿ ಸ್ವಾತಂತ್ರ ಚಳವಳಿ ಆರಂಭಿಸಿದರು
ಗಧರ್ ಸಂಘಟನೆಯ ಸ್ವಾತಂತ್ರ್ಯ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಏರುತ್ತಿರುವುದನ್ನು ಅರಿತ ಇಂಗ್ಲಿಷರು, ಸಿಕ್ಕಸಿಕ್ಕಲ್ಲಿ ಈ ಸಂಘಟನೆಯವರನ್ನು ಬಂಧಿಸಲಾರಂಭಿಸಿದರು. ಇದಕ್ಕೆಲ್ಲಾ ಅಂಜದ ಗಧರ್ ಪಡೆ, ಹೋರಾಟಕ್ಕೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಲು ಶ್ರೀಮಂತರ ಮನೆಯನ್ನು ದರೋಡೆ ಮಾಡಲಾರಂಭಿಸಿತು.
ಆದರೆ, ಸಂಘಟನೆಯೊಳಗಿದ್ದ ಬ್ರಿಟಿಷರ ಮಾಹಿತಿದಾರನೊಬ್ಬನಿಂದ ಗಧರ್ ಪಡೆಯ ಮುಂದಿನ ಯೋಜನೆಯನ್ನು ಬ್ರಿಟಿಷರು ಅರಿತರು. ಹೀಗಾಗಿ ಸಂಘಟನೆಯ ಎಲ್ಲಾ ಯೋಜನೆಯನ್ನು ಬ್ರಿಟಿಷರು ಹತ್ತಿಕ್ಕಿದರು. ಯೋಜನೆ ವಿಫಲವಾಗುವುದರ ಜೊತೆಗೆ ಬಂಧನದಿಂದ ತಪ್ಪಿಸಿಕೊಳ್ಳಲು ಹೋರಾಟಗಾರರು ಭಾರತ ಬಿಟ್ಟು ತೊಲಗಲು ನಿರ್ಧರಿಸುತ್ತಾರೆ, ಅದರಲ್ಲಿ ಸರಬಾ ಕೂಡಾ ಒಬ್ಬನಾಗಿದ್ದ.
ಆದರೆ, ತನ್ನ ಅಸಂಖ್ಯಾತ ಸಹದ್ಯೋಗಿಗಳು ಬ್ರಿಟಿಷರ ಬಂಧನದಲ್ಲಿರುವಾಗ ದೇಶ ಬಿಟ್ಟು ಹೋಗುವುದು ನಾಚಿಕೆಗೇಡು ಎನ್ನುವ ನಿರ್ಧಾರಕ್ಕೆ ಬರುವ ಸರಬಾ, ತನ್ನ 63 ಸಹದ್ಯೋಗಿಗಳೊಂದಿಗೆ ಮತ್ತೆ ಬ್ರಿಟಿಷರ ಕಣ್ತಪ್ಪಿಸಿ ವಾಪಸ್ ಬರುತ್ತಾನೆ. ಸರಬಾ ಮತ್ತು ತಂಡದ ಸದಸ್ಯರನ್ನು ಬ್ರಿಟಿಷರು ಬಂಧಿಸಿ ಲಾಹೋರಿಗೆ ಕಳುಹಿಸುತ್ತಾರೆ.
ನವೆಂಬರ್ 13, 1915ಕ್ಕೆ ಲಾಹೋರ್ ನ್ಯಾಯಾಲಯ ಬಂಧನ ಕ್ಕೊಳಗಾಗಿರುವ ಗಧರ್ ಸಂಘಟನೆಯ ಎಲ್ಲಾ 63 ಸದಸ್ಯರಿಗೆ ಗಲ್ಲು ಶಿಕ್ಷೆ ಪ್ರಕಟಿಸುತ್ತದೆ. ಅದರಲ್ಲಿ ಹತ್ತೊಂಬತ್ತು ವರ್ಷದ ಕರ್ತಾರ್ ಸಿಂಗ್ ಸರಬಾ ಎನ್ನುವ ಯುವಶಕ್ತಿಯೂ ಒಂದು. 6 ಅಡಿ ಉದ್ದ 6 ಅಡಿ ಅಂಗುಲದ ಬಂಧೀಖಾನೆಯಲ್ಲಿ ಬಂಧಿಯಾಗಿದ್ದ ಸರಬಾ, ಸಾವಿನ ಕೊನೇ ಕ್ಷಣದಲ್ಲೂ ಭೋಲೋ ಭಾರತ್ ಮಾತಾಕೀ, ವಂದೇ ಮಾತರಂ ಎಂದು ದೇಶಪ್ರೇಮ ಮೆರೆದು ದೇಶದ ಮುಂದಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಆದರ್ಶಪ್ರಾಯನಾದ.