ಶಬ್ದ ಮಾಲಿನ್ಯ ಕಾಯಿದೆಗೆ ವಿರುದ್ಧವಾಗಿ ಧಾರ್ಮಿಕ ಕಟ್ಟಡಗಳಲ್ಲಿ ಬಳಸಲಾಗುವ ಧ್ವನಿವರ್ಧಕಗಳು, ಆ್ಯಂಪ್ಲಿಫೈಯರ್ಗಳು ಮತ್ತು ಇತರ ಉಪಕರಣಗಳನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಜಪ್ತಿ ಮಾಡುವ ಅರ್ಜಿಗೆ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಧಾರ್ಮಿಕ ಕಟ್ಟಡಗಳಲ್ಲಿ ಅನಧಿಕೃತವಾಗಿ ಆ್ಯಂಪ್ಲಿಫೈಯರ್ ಮತ್ತು ಧ್ವನಿವರ್ಧಕಗಳನ್ನು ಬಳಸುವುದನ್ನು ನಿಲ್ಲಿಸುವ ಉದ್ದೇಶದಿಂದ ಹಲವರು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದರು. ಈ ರೀತಿ ಆ್ಯಂಪ್ಲಿಫೈಯರ್, ಧ್ವನಿವರ್ಧಕ ಮುಂತಾದವುಗಳನ್ನು ಬಳಸುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದೂ ದೂರಿದ್ದರು. ಶಬ್ದ ಮಾಲಿನ್ಯ (ರೆಗ್ಯುಲೇಶನ್ ಮತ್ತು ನಿಯಂತ್ರಣ) ನಿಯಮಗಳು, 2000 ಕಾಯ್ದೆ ಉಲ್ಲಂಘನೆ ವಿಚಾರವಾಗಿ ಅರ್ಜಿದಾರರ ದೂರಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಉತ್ತರಿಸುವಂತೆ ಕೋರಿದೆ.
ಈ ಸಂಬಂಧ ರಾಜ್ಯಕ್ಕೆ ಪತ್ರ ಸಲ್ಲಿಸಿದ ಹಂಗಾಮಿ ಮುಖ್ಯ ನ್ಯಾಯಾಧೀಶರಾದ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎಸ್.ಎಸ್. ಮಗದುಮ್ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ, ನೋಟಿಸ್ಗೆ ಉತ್ತರಿಸುವಂತೆ ಸೂಚಿಸಿದ್ದು, ನವೆಂಬರ್ 16ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಬೆಂಗಳೂರಿನ ಐಕಾನ್ ನಾರ್ತ್ ಅಪಾರ್ಟ್ಮೆಂಟ್ ನಿವಾಸಿಗಳು ಹೈಕೋರ್ಟ್ನಲ್ಲಿ ಈ ಅರ್ಜಿ ಸಲ್ಲಿಸಿದ್ದು, ಧಾರ್ಮಿಕ ಕಟ್ಟಡಗಳು ವ್ಯವಸ್ಥಿತ ನಿಯಮಗಳನ್ನು ಅನುಸರಿಸಲು ವಿಫಲರಾಗಿವೆ ಎಂದು ಆರೋಪಿಸಿದ್ದರು. ಅಲ್ಲದೆ, ಪೊಲೀಸರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಅರ್ಜಿದಾರರ ಆಕ್ಷೇಪಣೆಗಳನ್ನು ಕಾನೂನು ರೀತಿಯಲ್ಲಿ ಗಮನಿಸಲು ನಿರಾಕರಿಸಿದೆ ಎಂದೂ ಅರ್ಜಿದಾರರು ದೂರಿದ್ದಾರೆ. ಈ ದೂರಿನ ಸಂಬಂಧ ಆಡಿಯೋ-ವೀಡಿಯೋ ಮತ್ತು ಫೋಟೋ ಪುರಾವೆಗಳನ್ನು ಸಹ ಅರ್ಜಿದಾರರು ಹೊಂದಿದ್ದು, ಬೆಳಗಿನ ಜಾವ 5 ಗಂಟೆಗೆ ಮುಂಚಿತವಾಗೇ ಘೋಷಣೆಗಳು ಮತ್ತು ಭಾಷಣಗಳಿಗಾಗಿ ಧಾರ್ಮಿಕ ಕಟ್ಟಡಗಳು ಧ್ವನಿವರ್ಧಕಗಳನ್ನು ಬಳಸಿವೆ. ಈ ಮೂಲಕ ಅನುಮತಿಸಿದ ಸಮಯದ ನಿರ್ಬಂಧವನ್ನು ಉಲ್ಲಂಘಿಸಿವೆ ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಆರೋಪಿಸಿದ್ದಾರೆ. ನಿಯಮಗಳಿಗೆ ಅನುಸಾರವಾಗಿ ಔಪಚಾರಿಕ ಅನುಮೋದನೆ ಪಡೆಯುವವರೆಗೆ ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ವಿಳಾಸ ವ್ಯವಸ್ಥೆಗಳನ್ನು ಬಳಸದಂತೆ ದೂರವಿರಬಹುದೇ ಎಂದು ಹೈಕೋರ್ಟ್ ಆಗಸ್ಟ್ ತಿಂಗಳಲ್ಲಿ 16 ಮಸೀದಿಗಳಿಂದ ಪ್ರಮಾಣ ಪತ್ರ ಕೋರಿತ್ತು.
ಇದಕ್ಕೆ ವಿಚಾರಣೆಯ ಸಮಯದಲ್ಲಿ ಪ್ರತಿಕ್ರಿಯೆ ನೀಡಿದ ಮಸೀದಿಯೊಂದು ಧ್ವನಿವರ್ಧಕಗಳು ಮತ್ತು ಆ್ಯಂಪ್ಲಿಫೈಯರ್ಗಳಲ್ಲಿ ವ್ಯವಸ್ಥೆಯೊಂದನ್ನು ಇರಿಸಿದ್ದೇವೆ. ಧ್ವನಿ ಮಟ್ಟಗಳು ಅನುಮತಿಸಿದ ಡೆಸಿಬಲ್ ಮಿತಿಗಳನ್ನು ಮೀರಿದರೆ ಸ್ಪೀಕರ್ಗೆ ಪೂರೈಕೆಯನ್ನು ಆಫ್ ಮಾಡುತ್ತದೆ ಎಂದೂ ಹೇಳಿಕೆ ನೀಡಿದ್ದರು.
ಈ ಮಧ್ಯೆ, ಜುಲೈ ತಿಂಗಳಲ್ಲಿ ನ್ಯಾಯಾಲಯವು ಧಾರ್ಮಿಕ ಕಟ್ಟಡಗಳಲ್ಲಿ ಆ್ಯಂಪ್ಲಿಫೈಯರ್ ಮತ್ತು ಧ್ವನಿವರ್ಧಕಗಳನ್ನು ಅಕ್ರಮವಾಗಿ ಬಳಸುವ ವಿಚಾರದಲ್ಲಿ ಒಂದು ಧರ್ಮವನ್ನು ಮಾತ್ರ ಪ್ರತ್ಯೇಕಿಸುವುದು ಸರಿ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ದೇವಾಲಯಗಳು, ಮಸೀದಿಗಳು, ಚರ್ಚ್ಗಳು ಸೇರಿದಂತೆ ಎಲ್ಲ ಧಾರ್ಮಿಕ ಕಟ್ಟಡಗಳು ಶಬ್ದ ಮಾಲಿನ್ಯ ಮಾಡಬಾರದು, ಅನುಮತಿಗಿಂತ ಹೆಚ್ಚಿನ ಡೆಸಿಬಲ್ಗಳ ಬಳಕೆ ಮಾಡಬಾರದು ಎಂದು ಸರ್ಕಾರ 2000ರಲ್ಲಿ ಕಾಯ್ದೆ ಜಾರಿ ಮಾಡಿದೆ. ಆದರೆ, ಈ ನಿಯಮ ಪಾಲನೆಯಾಗುವಂತೆ ಪೊಲೀಸರು ಹಾಗೂ ಕರ್ನಾಟಕ ರಾಜ್ಯ ವಾಯುಮಾಲಿನ್ಯ ಮಂಡಳಿ ನೋಡಿಕೊಳ್ಳುತ್ತಿಲ್ಲ ಎಂಬುದು ಅರ್ಜಿದಾರರ ವಾದ.
ಇದನ್ನೂ ಓದಿ: ಮಸೀದಿ ಮೇಲಿನ ಮೈಕ್ ನೀವು ತೆಗಿತಿರೋ? ನಾವ್ ತೆಗಿಬೇಕೋ..?: ಸರ್ಕಾರಕ್ಕೆ ಮುತಾಲಿಕ್ ಎಚ್ಚರಿಕೆ
ಮುಸ್ಲಿಮರು ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿ ವರ್ಧಕ ಬಳಸುವುದರ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 21 ವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟ್ ಶಬ್ಧ ಮಾಲಿನ್ಯ ನಿಲ್ಲಿಸುವಂತೆ ಆದೇಶ ಮಾಡಿದೆ. ಆದರೆ, ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಆದೇಶ ಪಾಲನೆಯಾಗುತ್ತಿಲ್ಲ. ಹಾಗಾಗಿ ಇದರ ವಿರುದ್ಧ ಅಕ್ಟೋಬರ್ 7ರಿಂದ ಹೋರಾಟ ಪ್ರಾರಂಭಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೂ ಶಬ್ಧ ಮಾಲಿನ್ಯ ಆಗಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶ ಹೊರಡಿಸಿದೆ. ಆದರೆ, ಆದೇಶವನ್ನು ಜಾರಿಗೆ ತರಬೇಕಾದ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇದರಿಂದ ದೇಶ ಸೇರಿ ರಾಜ್ಯದಲ್ಲೂ ಶಬ್ಧ ಮಾಲಿನ್ಯ ಹೆಚ್ಚಾಗುತ್ತಲೇ ಬಂದಿದೆ. ಹಾಗಾಗಿ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ರಾಜ್ಯದ ಪ್ರತಿ ತಾಲೂಕುಗಳಲ್ಲಿ ಅಕ್ಟೋಬರ್ 7ರಂದು ಶ್ರೀರಾಮ ಸೇನೆಯ ವತಿಯಿಂದ ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆ, ದೇವಾಲಯ, ಮಸೀದಿ, ಚರ್ಚ್ ಹೀಗೆ ಅನೇಕ ಪ್ರದೇಶಗಳನ್ನು ನಿಶಬ್ಧ ವಲಯಗಳು ಎಂದು ಘೋಷಿಸಲಾಗಿದೆ. ಪ್ರಾರ್ಥನೆ, ಭಜನೆ ಈ ಬಗ್ಗೆ ನಮಗೆ ಯಾವುದೇ ಆಕ್ಷೇಪ ಇಲ್ಲ. ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಶಬ್ಧ ಮಾಲಿನ್ಯದ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ. ಸುಪ್ರೀಂ ಕೋರ್ಟ್ನ ಆದೇಶವಿದ್ದರೂ ಅದನ್ನು ಉಲ್ಲಂಘಿಸಲಾಗುತ್ತಿದೆ. ದಿನಕ್ಕೆ ಐದು ಬಾರಿ ಮಸೀದಿಗಳಲ್ಲಿ ಮೈಕ್ ಬಳಕೆ ಮಾಡುವ ಮೂಲಕ ಕಿರಿಕಿರಿ ಉಂಟು ಮಾಡಲಾಗುತ್ತಿದೆ ಎಂದರು.
ಸರ್ಕಾರವೇ ನೇರ ಹೊಣೆ
ಶಬ್ದ ಮಾಲಿನ್ಯ ತಡೆಗಟ್ಟುವಲ್ಲಿ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು, ಹೀಗಾಗಿ ಜನಸಾಮಾನ್ಯರು ಈ ಕಿರಿಕಿರಿಯನ್ನ ಸಹಿಸಿಕೊಂಡು ಜೀವನ ಮಾಡುವ ಪರಿಸ್ಥಿತಿಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆಗಳು ತಂದಿಟ್ಟಿವೆ. ಶೀಘ್ರವೇ ಈ ಶಬ್ಧ ಮಾಲಿನ್ಯ ತಡೆಯದಿದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.