ಧಾರವಾಡ: ಎಲ್ಲಾ ದೇವರಗಳ ಕೈಯಲ್ಲಿ ಶಸ್ತ್ರಗಳಿವೆ, ದೇವರುಗಳಿಗೆ ನಮಸ್ಕಾರ ಮಾಡುವಾಗ ನಾವು ಶಸ್ತ್ರಗಳನ್ನು ನೋಡುತ್ತೇವೆ, ಆದರೆ ಇಂದು ಒಂದೇ ಒಂದು ಶಸ್ತ್ರ ನಮ್ಮ ಮನೆಗಳಲ್ಲಿ ಇಲ್ಲದಾಗಿದೆ. ನಮ್ಮ ಮನೆಯಲ್ಲಿ ಕತ್ತಿ, ಖಡ್ಗ ಅಥವಾ ತಲ್ವಾರ್ ನಂತಹ ಒಂದು ಶಸ್ತ್ರ ಇಡಲೇಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನವನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಎಲ್ಲಾ ದೇವರಗಳ ಕೈಯಲ್ಲಿ ಶಸ್ತ್ರಗಳಿವೆ, ದೇವರುಗಳಿಗೆ ನಮಸ್ಕಾರ ಮಾಡುವಾಗ ನಾವು ಶಸ್ತ್ರಗಳನ್ನು ನೋಡುತ್ತೇವೆ, ಆದರೆ ಇಂದು ಒಂದೇ ಒಂದು ಶಸ್ತ್ರ ನಮ್ಮ ಮನೆಗಳಲ್ಲಿ ಇಲ್ಲದಾಗಿದೆ. ಕತ್ತಿ, ಖಡ್ಗ, ತಲ್ವಾರ್ ಇವುಗಳಲ್ಲಿ ಯಾವುದಾದರು ಒಂದು ಶಸ್ತ್ರ ನಮ್ಮ ಮನೆಗಳಲ್ಲಿ ಇರಲೇಬೇಕು. ಇವತ್ತಿಲ್ಲ ನಾಳೆ ಬೀದಿ ಕಾಳಗ ಆಗುತ್ತದೆ, ಅವತ್ತು ನಾವು, ನಮ್ಮ ಸಮಾಜ ಎಲ್ಲವನ್ನೂ ಎದುರಿಸಬೇಕಾಗುತ್ತದೆ ಎಂದರು.
ನಮ್ಮ ದೇಶದ ಭವಿಷ್ಯ ಉಳಿಯುತ್ತದೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆ ನೆನಪು ಮಾಡಿಕೊಳ್ಳೋಣ, ಈ ರೀತಿ ದೇಶದಲ್ಲಿ ಆವರಿಸಿಕೊಂಡಿರುವ ಶತ್ರುಗಳನ್ನು ಗುರುತಿಸೋಣ. ಶತ್ರುಗಳನ್ನು ತಡೆದು ನಮ್ಮ ಗುಡಿ-ಗೋಪುರ, ದೇವಸ್ಥಾನಗಳನ್ನು ಉಳಿಸೋಣ, ನಮ್ಮ ಅಕ್ಕ, ತಂಗಿಯರ ಮಾಂಗಲ್ಯ ರಕ್ಷಿಸೋಣ ಎನ್ನುವ ಮೂಲಕ ಸಾರ್ವಜನಿಕರನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ.