ಉಡುಪಿ : ರವಿ ಕಟಪಾಡಿ ಈ ಹೆಸರು ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಮುಂಬೈನಲ್ಲಿ ಕೂಡ ಬಹಳ ಪ್ರಸಿದ್ಧಿ. ಪ್ರತಿ ಬಾರಿ ಕೃಷ್ಣ ಜನ್ಮಾಷ್ಟಮಿ ಬಂದಾಗಲೂ ಈ ವ್ಯಕ್ತಿ ಸುದ್ದಿಯಲ್ಲಿ ಇರುವುದಷ್ಟೆ ಅಲ್ಲ, ಅವರನ್ನು ಬೆಂಬತ್ತಿ ಮಾಧ್ಯಮದವರು ಕೂಡ ಹುಡುಕಿಕೊಂಡು ಹೋಗೋದು ಕಳೆದ ಆರೇಳು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಸೆಂಟರಿಂಗ್ ಕೆಲಸ ಮಾಡುವ ರವಿ ಕಟಪಾಡಿ ಅವರು ಕ್ಯಾನ್ಸರ್ ಪೀಡಿತ ಬಡ ಮಕ್ಕಳ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವ ಏಕೈಕ ಉದ್ದೇಶದಿಂದ ಪ್ರತಿ ಜನ್ಮಾಷ್ಟಮಿ ಬಂದಾಗಲೂ ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಧರಿಸಿ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸುವುದು ಅವರು ರೂಢಿಸಿಕೊಂಡು ಬಂದಿರುವ ಮಾನವೀಯತೆಯ ಗುಣ. ನಟ ಅಮಿತಾಭ್ ಬಚ್ಚನ್ ನಡೆಸಿ ಕೊಡುವ ಕರೋಡ್ಪತಿಯಲ್ಲಿಯೂ ರವಿ ಅವರನ್ನು ಕರೆಸಿ ಷೋ ನಡೆಸಿ ಅಲ್ಲಿ ಬಂದಂತಹ 12.50 ಲಕ್ಷಗಳಷ್ಟು ಹಣವನ್ನು ಕೂಡ ತಮ್ಮ ಉದ್ದೇಶಕ್ಕಾಗಿಯೇ ಬಳಸಿದ ಸ್ವಾರ್ಥ ರಹಿತ ಜೀವನ ರವಿ ಅವರದು. ರವಿ ಅವರ ಈ ಉದ್ದೇಶಕ್ಕಾಗಿಯೇ ದಾನಿಗಳು ಅವರಿಗೆ ನೀಡಿರುವ ಹಣವೂ ಕೂಡ ಕ್ಯಾನ್ಸರ್ ಪೀಡಿತ ಬಡಮಕ್ಕಳ ಚಿಕಿತ್ಸೆಗೆ ಹೋಗುತ್ತಿರುವುದು ನಿಜಕ್ಕೂ ಒಂದು ಮಾದರಿಯ ಸಂಗತಿ.ಇಂತಹ ಸಮಾಜ ಸೇವಾ ಮನೋಭಾವದ ರವಿ ಕಟಪಾಡಿ ಅವರಿಗೆ ಭಾರತ ಸರ್ಕಾರ ನೀಡುವ ಪದ್ಮ ಪ್ರಶಸ್ತಿಯು ಬಂದರೆ ಅವರ ಕೆಲಸಕ್ಕೂ, ಪ್ರಶಸ್ತಿಯ ಮೂಲ ಉದ್ದೇಶಕ್ಕೂ ಒಂದು ಅರ್ಥ ಇರುತ್ತದೆ. ಅವರ ಈ ಸಮಾಜ ಸೇವಾ ಉದ್ದೇಶ ಸದಾ ಹೀಗೆ ಮುಂದುವರೆಯಲಿ ಎಂಬುದೇ ನಮ್ಮ ಆಶಯ.ನಮ್ಮ ಹೆಮ್ಮೆಯ ಕನ್ನಡಿಗ ರವಿ ಕಟಪಾಡಿ.