ಉಡುಪಿ: ಬ್ರಿಟಿಷರು ಸೆಟಪ್ ಮಾಡಿರುವ ಎಜುಕೇಶನ್ ಸಿಸ್ಟಂನ್ನು ನಾವು ಫಾಲೋ ಮಾಡುತ್ತಿದ್ದೇವೆ. ಈ ವ್ಯವಸ್ಥೆ ನಮಗೆ ಜೀವನ ಪ್ರೀತಿ, ಬದುಕುವುದನ್ನು ಕಲಿಸಿಕೊಡುತ್ತಿಲ್ಲ. ಗುಲಾಮಗಿರಿಯನ್ನು ಮುಂದುವರಿಸುತ್ತಿದೆ ಎಂದು ನಟ, ಸ್ಯಾಡಲ್ವುಡ್ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಟೀಕಿಸಿದ್ದಾರೆ.
ಗುಲಾಮ ಪದ್ಧತಿಗಾಗಿ ಈ ಎಜುಕೇಶನ್ ಸಿಸ್ಟಂ ಜಾರಿಗೆ ತಂದರು. ಅದನ್ನು ನಾವು ಮುಂದುವರಿಸುತ್ತಿದ್ದೇವೆ. ಗುರುಕುಲ ಪದ್ಧತಿಯ ಎಲ್ಲಾ ಕ್ರಮವನ್ನು ಮಕ್ಕಳಿಗೆ ಕಲಿಸುವ ಅವಶ್ಯಕತೆ ಇದೆ. ಶಾಲೆಗಳಲ್ಲಿ ಜೀವನ ಸಂಸ್ಕೃತಿಯ ಪಾಠ ಶುರುವಾಗಬೇಕಾಗಿದೆ ಎಂದು ಉಡುಪಿಯಲ್ಲಿ ಹೇಳಿದರು. ಉಡುಪಿಯ ನೇಜಾರ್ ನಲ್ಲಿ ಕೇದಾರೋತ್ಥಾನ ಟ್ರಸ್ಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಮಾಡಿದರು.
ಇನ್ಮುಂದೆ ಸಿನಿಮಾ ಸೆಟ್ನಲ್ಲಿ ಕುಚ್ಚಿಗೆ ಗಂಜಿ ಉಪ್ಪಿನಕಾಯಿ, ಚಟ್ನಿ:
ಯುವಕರು ಸಾಮಾಜಿಕ ಜಾಲತಾಣದಲ್ಲಿ ಟೈಂ ಪಾಸ್ ಮಾಡುವ ಬದಲು ಕೃಷಿ ಮಾಡಿ ಎಂದ ರಿಷಬ್ ಶೆಟ್ಟಿ, ಹಡಿಲು ಭೂಮಿ ಅಭಿಯಾನ ಇಡೀ ದೇಶಕ್ಕೆ ಮಾದರಿ. ಕರಾವಳಿಯಲ್ಲಿ ಹಡಿಲು ಭೂಮಿಯಿಂದ ಬಂದ ಅಕ್ಕಿ, ನಮ್ಮದೇ ಕುಚ್ಚಿಗೆ ಅಕ್ಕಿಯ ಬ್ರ್ಯಾಂಡ್ ಆಗಲಿ. ನಮ್ಮ ಸಿನಿಮಾ ಸೆಟ್ ನಲ್ಲಿ ಕುಚ್ಚಿಗೆ ಅಕ್ಕಿ ಗಂಜಿ ಚಟ್ನಿ ಉಪ್ಪಿನ ಕಾಯಿಯನ್ನು ಪ್ರಚಾರ ಮಾಡುತ್ತೇವೆ. ನನ್ನ ಮೂವಿ ಸೆಟ್ ನಲ್ಲಿ ಕುಚ್ಚಿಗೆ ಅಕ್ಕಿಯ ಗಂಜಿಯೇ ಕೊಡುತ್ತೇವೆ. ಗಂಜಿ ಉಂಡರೆ ತೃಪ್ತಿ ಮತ್ತು ಆರೋಗ್ಯ ಸಿಗುತ್ತದೆ. ಎಲ್ಲರಿಗೂ ಇದು ಸಿಗಲಿ.
ರೈತ ದೇಶದ ಬೆನ್ನೆಲುಬು. ಈಗ ರೈತರಿಗೆ ಬೆನ್ನು ನೋವು ಶುರುವಾಗಿದೆ. ಕೃಷಿ ಭೂಮಿ ಹಡಿಲು ಬಿಡೋದು ಸರಿಯಲ್ಲ. ಕಳೆ ಜಾಸ್ತಿ ಕೊಳೆ ಜಾಸ್ತಿಯಾದ ಭೂಮಿಯನ್ನು ಫಸಲುಗೊಳಿಸುವುದು ನಮ್ಮ ಕರ್ತವ್ಯ. ಜನಪ್ರತಿನಿಧಿಯೊಬ್ಬರು ರಾಜಕೀಯ ಮಾಡುವ ಜೊತೆಗೆ ಸಾರ್ಥಕ ಕೆಲಸ ಮಾಡಿದ್ದಾರೆ. ವೋಟ್ ಬ್ಯಾಂಕ್, ಜನರ ಮನಸ್ಸು ಹಾಳು ಮಾಡುವ ಕೆಲಸ ಮಾಡುವವರ ನಡುವೆ ಶಾಸಕ ಭಟ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ರಿಷಬ್ ಹೇಳಿದರು.
ಕೃಷಿ ಉದ್ಯೋಗ ಅಲ್ಲ, ಅದು ಸಂಸ್ಕೃತಿ
ಅಂತರ್ಜಲ ವೃದ್ಧಿಗೆ ಹಡಲುಭೂಮಿ ಕೃಷಿ ಯೋಜನೆ ಬಹಳ ಸಹಕಾರಿ. ಕೃಷಿ ಹೊಟ್ಟೆಪಾಡಿಗೆ, ಹಣಕ್ಕಾಗಿ ಉದ್ಯೋಗಕ್ಕಾಗಿ ಕೃಷಿ ಅಲ್ಲ. ಅದೊಂದು ಹಬ್ಬ, ಕೃಷಿಯನ್ನು ಸಂಭ್ರಮಿಸುತ್ತಾ ಕೆಲಸ ಮಾಡಿದರೆ ಖುಷಿಖುಷಿಯಾಗಿ ಮಾಡಬೇಕು. ಭತ್ತದ ಜೊತೆಗೆ ಸಮಗ್ರ ಕೃಷಿ ಮಾಡಬೇಕು. ಕೃಷಿಯಿಂದ ನೆಮ್ಮದಿ ಶಾಂತಿ ತೃಪ್ತಿ ಸಿಗುತ್ತದೆ. ಮೆಡಿಕಲ್ ಎಂಜಿನಿಯರಿಂಗ್ ತರ ಕೃಷಿ ಕೂಡಾ ವಿಶ್ವದಾದ್ಯಂತ ಭೂಮ್ ಗೆ ಬಂದಿದೆ. ಇದು ನಿಲ್ಲಲ್ಲ, ಈಗ ಶುರು ಆಗಿದೆ. ನಮ್ಮ ಕೃಷಿಗೆ, ದೇಶದ ಕಲೆಗೆ ವಿಶ್ವ ಮಟ್ಟದಲ್ಲಿ ಬೆಲೆ ಸಿಗಲಿದೆ ಎಂದರು.